Thursday, 11 July 2024

ವರದೇಂದ್ರಯತಿ ಚಕ್ರವರ್ತಿ - ಶ್ರೀ ಜಗನ್ನಾಥದಾಸರು

ಹರಿದಾಸರ ಕೃತಿಗಳು, ಅವರು ಬಳಸುವ ಒಂದೊಂದು ಪದಗಳು ಕೂಡ ಅನೇಕ ಅರ್ಥಗಳನ್ನು ಒಳಗೊಂಡಿರುತದೆ.
ಹೀಗಿರುವಾಗ ನಾವು ದಾಸಾರ್ಯರು ಬಳಸಿದ ಪದಗಳ ಆಂತರ್ಯವನ್ನು ತಿಳಿಯುವುದು ತುಂಬಾ ಕಷ್ಟ ಹಾಗು ಯೋಗ್ಯತೆ ಅಂತೂ ಸರ್ವಥಾ ಅಲ್ಲ.
ಆದರೂ ಅವರ ಕೃಪೆಯಿಂದ ನಮ್ಮನಮ್ಮ ಯೋಗ್ಯತಾನುಸಾರವಾಗಿ ಅನುಸಂಧಾನಪೂರ್ವಕ್ಕೆ ಬೇಕಾದಷ್ಟು ಅರ್ಥೈಸಿಕೊಳ್ಳುತ್ತೇವೆ.

ಶ್ರೀ ಜಗನ್ನಾಥದಾಸರು ತಮ್ಮ ಗುರುಗಳಾದ ಶ್ರೀ ವರದೇಂದ್ರತೀರ್ಥರ ಮೇಲೆ ಬರೆದ ಒಂದು ಕೃತಿಯ ಯಥಾ ಶಕ್ತಿ ಯಥಾ ಮತಿ ಅರ್ಥದ ವಿವರಣೆಯ ಒಂದು ಚಿಕ್ಕ ಪ್ರಯತ್ನ.

ವರದೇಂದ್ರಯತಿ ಚಕ್ರವರ್ತಿ ನಿರಂ |
ತರ ವರ್ಣಿಸುವೆ ನಿಮ್ಮಕೀರ್ತೀ |
ಪರಮಾಕರುಣಿ ನಿಮ್ಮಾ ಚರಣಕಮಲ ಯುಗ್ಮ|
ಕೆರಗಿಬೇಡುವೆ ವರವಾ ಯೆಮ್ನನೂ ಹೊರವಾ ॥ ಪ ॥

ಭಾವಾರ್ಥ -
ಶ್ರೀ ವರದೇಂದ್ರತೀರ್ಥರೇಂಬ ಯತಿ ಚಕ್ರವರ್ತಿಯನ್ನು, ಅವರ ಕೀರ್ತಿಯನ್ನು ಸದಾಕಾಲ ವರ್ಣಿಸುವೆವು
ಪರಮ ಕರುಣಾಳುಗಳಾದ ನಿಮ್ಮ ಕಮಲದಂತೆ ಇರುವ ಪಾದದ್ವಯಗಳಿಗೆ ಎರಗಿ ಬೇಡುವೆವು ವರವನ್ನು , ನಮ್ಮನೆಲ್ಲ ಸಲಹುವಂತಹ....॥ ಪ ॥

ನತಜನ ಬಂಧೂ ನೀನೆಂದು ತಿಳಿದು |
ನತಿಸಿದೇ ಗುಣಗಣಸಿಂಧು |
ಪ್ರತಿಗಾಣೆ ನಿಮಗೆ ಸುವ್ರತಿವರ ಪ್ರಣತಾ ಕಾ |
ಮಿತ ಕಲ್ಪತರುವೆ ನಿರ್ಜಿತ ಮಾರಾಮಾರ್ಗಣ | ಕ್ಷಿತಿಪರಿಗೆ ಪ್ರತಿದಿನದಿ ಪರಮಾದ್ಭುತವೆನಿಸುವದು ನಿಮ್ಮದಾನ |
ಪ್ರತತಿ ಸಾಂಪ್ರತ ಮೃದುಮಧುರ ವಚನಾ ಶಾಸ್ತ್ರ ಪ್ರವಚನಾ ॥ ೧ ॥

ಪದವಿಂಗಡಣೆ - 
ನತಜನ = ನತ + ಜನ
ಗುಣಗಣಸಿಂಧು = ಗುಣ + ಗಣ + ಸಿಂಧು
ಮಾರಾಮಾರ್ಗಣ = ಮಾರ + ಮಾರ್ಗಣ

ಪದಾರ್ಥ-
ನತ = ನಮಸ್ಕರಿಸುವುದು, ಶರಣಾಗುವುದು
ಗುಣಗಣಸಿಂಧು  = ಗುಣಗಳ ರಾಶಿಗಳ ಸಾಗರ 
ಪ್ರತಿಗಾಣೆ = ಸರಿಗಾಣೆ
ಸುವ್ರತಿವರ = ವೇದ ಹಾಗು ಮಧ್ವ ಶಾಸ್ತ್ರದ ಮಾರ್ಗ ಬಿಡದೆ ಅನುಸರಿಸುವ
ಪ್ರಣತಾ = ನಮಸ್ಕಾರಿಸುವೆನು
ನಿರ್ಜಿತ = ಸೋಲರಿಯದ, ಅಜೇಯ
ಮಾರ = ಮನ್ಮಥ, ಕಾಮ, ಲೌಕಿಕ ವಿಷಯಾಸಕ್ತಿ
ಮಾರ್ಗಣ = ಬಾಣ
ಕ್ಷಿತಿಪರಿಗೆ = ಭೂಮಿಯಲ್ಲಿ ವಾಸಿಸುವ ಜನ
ಪ್ರತತಿ = ಗುಂಪು
ಸಾಂಪ್ರತ = ಈ ಕ್ಷಣದ

ಭಾವಾರ್ಥ -
ನಿಮ್ಮನ್ನು ಆಶ್ರಯಿಸಿ ಬಂದ ಭಕ್ತರಿಗೆ ಸದಾ ಬಂಧುಗಳಂತೆ ಇರುವಿರಿ, ಇದನ್ನು ತಿಳಿದು ನಾನು ಸದ್ಗುಣಗಳ ರಾಶಿಯ ಸಮುದ್ರದಂತೆ ಇರುವ ನಿಮ್ಮನ್ನು ನಮಿಸುತ್ತೇನೆ,
ಶೃತಿ ಸಮ್ಮತವಾದ ಮಧ್ವ ಶಾಸ್ತ್ರವನ್ನು ಬಿಡದೆ ಪಾಲಿಸುವ ನಿಮಗೇ ಸರಿಸಾಟಿ ಕಾಣೆ, ಶರಣಾಗತರಿಗೆ, ಬೇಡಿ ಬಂದವರಿಗೆ ಕಲ್ಪತರುವಿನಂತಿರುವ, ಕಾಮನ ಬಾಣ(ಲೌಕಿಕ ವಿಷಯಗಳಲ್ಲಿನ ಆಸಕ್ತಿ) ಗೆದ್ದ ಸದ್ಯತಿ, ಬೇಡಿದ ಕೊಡಲೇ ತತ್ಕ್ಷಣದಲ್ಲಿ ದಾನ ರೂಪವಾದಂತಹ ಅನುಗ್ರಹದ  ಮಳೆಯನ್ನೇ ಸುರಿಸುವ ಹಾಗೂ ಶಾಸ್ತ್ರ ಪ್ರವಚನಗಳಲ್ಲಿ ನಿಮ್ಮ  ನಿರರ್ಗಳವಾದ ಮಧುರ ವಚನಗಳ ಕಂಡು ಭೂಮಿಯ ರಾಜರಿಗೆ ಪರಮ ಅದ್ಭುತವೆನಿಸುತ್ತಿಹದು

ಮರುತಾ ಮತಾಂಬುಧಿ ಚಂದ್ರಾ ಚಾಮೀ |
ಕರವರ್ಣಾ ಸರಸಾ ಕವೀಂದ್ರಾ |
ಪರಮತ ತಿಮಿರ ಭಾಸ್ಕರ ವಸುಧೀಂದ್ರ ಸ 1
ದ್ಗುರು ಕರಸಂಜಾತ ನಿರುಪಮ ನಿರ್ಭೀತಾ |
ಖರಮಥನಪದಕೋಕನದ ಮಧುಕರ ಕೃಪಾಕರ ಕರವಪಿಡಿದು | ದ್ಧರಿಸುವದು ಭೂಸುರಕುಲೋತ್ತಂಸಾ ನಮೋ ಪರಮಹಂಸಾ ॥

ಪದವಿಂಗಡಣೆ - 
ಮತಾಂಬುಧಿ = ಮತ + ಅಂಬುಧಿ
ಚಾಮೀಕರವರ್ಣ = ಚಾಮೀಕರ +ವರ್ಣ
ಖರಮಥನಪದಕೋಕನದ = ಖರ + ಮಥನ + ಪದ + ಕೊಕನದ
ಭೂಸುರಕುಲೋತ್ತಂಸಾ = ಭೂಸುರ + ಕುಲ + ಉತ್ತಂಸ

ಪದಾರ್ಥ-
ಚಾಮೀಕರ = ಬಂಗಾರ
ತಿಮಿರ = ಅಂಧಕಾರ
ಖರ = ದೈತ್ಯ
ಖರಮಥನಪದ = ದೈತ್ಯ ಕುಲಾಂತಕನಾದ ನಾರಾಯಣನ ಪಾದಗಳು
ಕೋಕನದ = ಕಮಲ
ಉತ್ತಂಸ = ಉತ್ತಮ

ಭಾವಾರ್ಥ - 
ಮರುತ ಮತವೆಂಬ ಸಮುದ್ರಕ್ಕೆ ಚಂದ್ರರಂತೆ ಪ್ರಕಾಶಿಸುವ, ಬಂಗಾರದ ಬಣ್ಣದ ಸೊಬಗಿನಂತಿರುವ ಜ್ಞಾನಿಗಳ ಅರಸ,
ಪರವಾದಿಗಳೆಂಬ ಅಂಧಕಾರಕ್ಕೆ ಸೂರ್ಯನಂತಿರುವ ಶ್ರೀ ವಸುಧೀಂದ್ರತೀರ್ಥರೆಂಬ ಸದ್ಗುರುವಿನ  ಸಾಟಿಯಿಲ್ಲದ ನಿರ್ಭೀತ ಶಿಷ್ಯರಾದ ನೀವು,
ಸದಾಕಾಲ ದುಂಬಿಯು ಕೆಂದಾವರೆಗೆ ಸುತ್ತುವಂತೆ ದೈತ್ಯ ಕುಲಾಂತಕನಾದ ನಾರಾಯಣನ ಪಾದಗಳಿಗೆ ಆಶ್ರಯಿಸಿರುವಿರಿ,
ಕೃಪಾಕರರಾದ ನೀವು, ನಮ್ಮನ್ನು ಕೈ ಹಿಡಿದು ಉದ್ಧರಿಸಬೇಕು, ಪಂಡಿತರ ಹಾಗು ಜ್ಞಾನಿಗಳ ಗುಂಪಿಗೆ ಕಲಶಪ್ರಾಯರೇನಿಸಿದ, ಪರಮಹಂಸರಾದ ನಿಮಗೆ ನಮಿಸುತ್ತೇನೆ

ಕಲಿತಾ ಸುಂದರ ಮಂದಹಾಸಾ ಹೇ ನಿ ।
ಷ್ಕಲುಷಾ ಸುತತ್ವ ವಿಲಾಸಾ |
ಗಳಿತಾಘಸಂಘ ನಿಶ್ಚಲ ಜಗನ್ನಾಥವಿಠಲ |
ನೊಲಿಮಿಯಾ ಪಡೆದಿಳೆಯೊಳು ಚರಿಸುವಾ |
ಭಳಿರೆ ಪ್ರತಿಯೋಗಿಗಳೆನಿಪ ಕರಿಕಲಭ ಕೇಸರಿ ನಿನ್ನ ದಾಸರೊ | ಳೊಲಿದು ಪಾಲಿಪುದನವರತೆ ಯನ್ನಾ ನಂಬಿದೆನೊ ನಿನ್ನಾ ॥ ೩ ॥

ಪದವಿಂಗಡಣೆ - 
ಗಳಿತಾಘಸಂಘ = ಗಳಿತ + ಅಘ + ಸಂಘ
ಪಡೆದಿಳೆಯೊಳು = ಪಡೆದು + ಇಳೆಯೊಳು
ಪ್ರತಿಯೋಗಿಗಳೆನಿಪ = ಪ್ರತಿಯೋಗಿಗಳು + ಏನಿಪ
ಕರಿಕಲಭ = ಕರಿ + ಕಲಭ

ಪದಾರ್ಥ-
ಗಳಿತ = ತೆಗೆಯುವುದು, ಬಿಳಿಸುವುದು
ಅಘ = ದುಃಖ, ಪಾಪಗಳು
ಸಂಘ = ಸಮೂಹ, ಗುಂಪು
ನಿಶ್ಚಲ = ಅಚಲವಾದ, ಸ್ಥಿರವಾದ
ಪ್ರತಿಯೋಗಿಗಳು = ವಾದದಲ್ಲಿ ಎದುರಾಳಿ
ಕರಿಕಲಭ = ಆನೆಯ ಮರಿ, ಯೌವನದ ಆನೆ, ಮದ್ದಾನೆ
ಕೇಸರಿ = ಹುಲಿ

ಭಾವಾರ್ಥ - 
ಸುಂದರವಾದ ಮಂದಹಾಸದಿಂದ ಕೂಡಿದ ನೀವು , ದೋಷರಹಿತವಾದಂತಹ, ಪರಿಪೂರ್ಣವಾದಂತಹ ಸೊಬಗಿನ ಮಧ್ವಶಾಸ್ತ್ರದಲ್ಲಿ ಅನಾಯಾಸವಾಗಿ ವಿಹರಿಸುವಿರಿ.
ಭಕ್ತರ ಪಾಪಗಳ ಹಾಗೂ ದುಃಖಗಳ ಸಮೂಹವನ್ನೇ ನಾಶ ಮಾಡುವಲ್ಲಿ ಸ್ಥಿರ(ನಿರತ)ವಾಗಿರುವ ಜಗನ್ನಾಥ ವಿಠಲನ ಒಲುಮೆಯ ಪಡೆದು ಭೂಮಿಯಲ್ಲಿ ಸಂಚರಿಸುವರ,
ಪ್ರತಿಯೊಗಿಗಳೆಂಬ ಮದ್ದಾನೆಗಳಿಗೆ ಹುಲಿಯಂತಿರುವ ಗಜಕೇಸರಿ,
ನಿಮ್ಮ ದಾಸರಿಲ್ಲಿ ಒಬ್ಬಾನಾದ ನನಗೆ(ನಮಗೆ) ಅನವರತವಾಗಿ ಪಾಲಿಸಬೇಕು ಎಂದು ನಿಮ್ಮನ್ನು ನಂಬಿದೇನೆ

ವಾದೇ ವಿಜಯಶೀಲಾಯ ವರದಾಯ ವರಾರ್ಥಿನಾಂ
ವದಾನ್ಯಜನಸಿಂಹಾಯ ವರದೇಂದ್ರಾಯ ತೇ ನಮ:


        ||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||

Friday, 17 February 2023

ಎಂದು ಕಾಂಬೆನೊ ಪಾಂಡುರಂಗಾ ಮೂರುತಿಯಾ

ಹರಿದಾಸರ ಆರಾಧ್ಯ ದೈವನಾದ ಶ್ರೀ ಪಾಂಡುರಂಗ ವಿಠಲನ ಮುರುತಿಯ ವರ್ಣಿಸುವ ಶ್ರೀ ಜಗನ್ನಾಥ ದಾಸರ ಅದ್ಭುತವಾದ ಕೃತಿ

ಎಂದು ಕಾಂಬೆನೊ ಪಾಂಡುರಂಗಾ ಮೂರುತಿಯಾ | ಇಂದುಭಾಗ ನಿವಾಸ ನರನ ಸಾರಥಿಯಾ ॥ ಪ ||

ಪದಾರ್ಥ -
ಇಂದು = ಚಂದ್ರ
ನರ = ಅರ್ಜುನ

ಭಾವಾರ್ಥ -
ಚಂದ್ರಭಾಗ ನದಿಯ ತೀರದಲ್ಲಿ ಇರುವ  ಪಂಢರಾಪುರದಲ್ಲಿ ನಿಂತಿರುವಂತಹ, ಅರ್ಜುನನ ಸಾರಥಿಯಾದ, 
ಆ ಪಾಂಡುರಂಗನ ದಿವ್ಯ ಮುರುತಿಯ ಎಂದು ನೋಡುವೆನು 

ಅರುಣಾಬ್ಜೋಪಮ ಚಾರು ಚರಣಾಂಗುಲಿ ನಖರಾ ।
ತರುಣೀಂದುಚ್ಛವಿ ತಿರಸ್ಕರಿಸೂವ ಪ್ರಖರಾ |
ಕಿರಿಗೆಜ್ಜೆ ಕಡೆಯಾ ನೂಪುರ ಪೆಂಡೆ ಶಫರಾ । 
ತ್ಯೆರ ಜಂಘೆ ಜಾನು ಭಾಸ್ವರ ರತ್ನ ಮುಖರಾ ॥ ೧ ॥

ಪದವಿಂಗಡಣೆ - 
ಅರುಣಾಬ್ಜೋಪಮ = ಅರುಣ + ಅಬ್ಬ + ಉಪಮ
ಚರಣಾಂಗುಲಿ = ಚರಣ + ಅಂಗುಲಿ
ತರುಣೀಂದುಚ್ಛವಿ = ತರುಣ + ಇಂದು + ಉಚ್ಛವಿ
ಕಿರಿಗೆಜ್ಜೆ = ಕಿರಿ + ಗೆಜ್ಜೆ 

ಪದಾರ್ಥ -
ಅರುಣಾಬ್ಜೋಪಮ = ಕೆಂಪು ಕಮಲದಂತೆ ಇರುವ,
ಚಾರು = ಸುಂದರವಾದ, ತರುಣೀಂದುಚ್ಛವಿ = ಬಾಲ ಚಂದ್ರನ / ಈಗಷ್ಟೇ ಉದಯಿಸಿದ ಚಂದ್ರನ ಕಾಂತಿಯನ್ನು,ತ್ಯೆರ = ಮುಸುಕಿನಲ್ಲಿ
ಭಾಸ್ವರ = ಪ್ರಕಾಶಿಸುವ,
ಮುಖರಾ = ಮುಕುರ = ಕನ್ನಡಿ 

ಭಾವಾರ್ಥ - 
ಕೆಂದಾವರೆದಂತಹ ಸುಂದರವಾದ ಚರಣ, ಅಂಗುಲಿ, ನಖರಗಳ್ಳುಳವನೆ,
ಉದಯಿಸಿದ ಚಂದ್ರನ ಕಾಂತಿಯನ್ನೂ ತಿರಸ್ಕರಿಸುವಂತಹ ಪ್ರಖರವಾದ ಕಾಂತಿಯುಳ್ಳವನ,
ಕಾಲಿನಲ್ಲಿ ಮೀನಿನ ಆಕಾರದಂತೆ ಇರುವ ಗೆಜ್ಜೆ, ಕಿರುಗೆಜ್ಜೆ, ಕಡೆಯ, ಪೆಂಡೆಗಳು ಇರುವ ನೂಪುರಗಳು, 
ಮರೆಯಲ್ಲಿ ಇರುವ ತೊಡೆ ಮೊಣಕಾಲುಗಳು, ಸೂರ್ಯನಂತೆ ಕಾಂತಿ, ರತ್ನದಂತೆ ಗಟ್ಟಿ, ಕನ್ನಡಿಯಂತೆ ಮಿಂಚುತ್ತಿರುವವನ 

ರಂಭಾ ಪೋಲುವ ವೂರು ಪೊಂಬಣ್ಣಾಂಬರವಾ |
ಕುಂಭಿ ಮಸ್ತಕದೊಲ್ನಿತಂಬದಿ ಪೊಳವಾ |
ಕಂಬು ಮೇಖಳ ಕಂಜ ಗಂಭೀರನಾಭಿ |
ಅಂಬುಧಿಶಾಯಿ ವಿಧಿ ಶಂಭು ಪೂಜಿತನಾ ॥ ೨ ॥

ಪದವಿಂಗಡಣೆ -
ಪೊಂಬಣ್ಣಾಂಬರವಾ = ಪೊಂಬಣ್ಣ + ಅಂಬರವ
ಮಸ್ತಕದೊಲ್ನಿತಂಬದಿ = ಮಸ್ತಕದೊಲ್ + ನಿತಂಬದಿ
ಅಂಬುಧಿಶಾಯಿ = ಅಂಬುದ್ಧಿ + ಶಾಯಿ 

ಪದಾರ್ಥ -
ರಂಭಾ - ಬಾಳೆಯಗಿಡ, ವೂರು = ಊರು = ತೊಡೆ/ಕಾಲು,
ಪೊಂಬಣ್ಣಾಂಬರವಾ = ಬಂಗಾರ ಬಣ್ಣದ ವಸ್ತ್ರ, ಕುಂಭಿ= ಮಡಿಕೆ, ಮಸ್ತಕ = ತಲೆ, ನಿತಂಬ = ಪೃಷ್ಠ ಭಾಗ, ಕಂಬು = ಶಂಖ, ಮೇಖಳ = ಡಾಬು, ಕಂಜ = ಕಮಲ, ನಾಭಿ = ಹೊಕ್ಕಳು, ಅಂಬುಧಿಶಾಯಿ = ಸಾಗರದಲ್ಲಿ ಮಲಗಿದವ, ವಿಧಿ = ಬ್ರಹ್ಮ ದೇವರು, ಶಂಭು = ರುದ್ರ ದೇವರು

ಭಾವಾರ್ಥ -
ಬಾಳೆಯ ಗಿಡದಂತೆ ಕಾಲುಗಳ್ಳುಳವನ , ಬಂಗಾರ ಬಣ್ಣದ ವಸ್ತ್ರವನ್ನು ಧರಿಸಿದವನ,
ಮಡಿಕೆಯ ಆಕಾರದಂತಿರುವ ಮಸ್ತಕ, ಹೊಳೆಯುತ್ತಿರುವ ಹಿಂಬದಿ,
ಕಮಲದಂತಹ ಗಂಭೀರವಾದ ನಾಭಿಯ ಹತ್ತಿರ ಶಂಖ, ನಾಭಿಯ ಸುತ್ತ ಸುಂದರವಾದ ಡಾಬು .
ಸಮುದ್ರ ದಲ್ಲಿ ಮಲಿಗಿದವ ಅಂದರೇ ಸಾಗರದಲ್ಲಿ ಶಯಿಸುವ, ಬ್ರಹ್ಮನಿಂದ ಹಾಗು ರುದ್ರನಿಂದ ಪೋಜಿತನಾದ ಶ್ರೀಮನ್ನಾರಾಯಣನ

ಲವಕುಕ್ಷಿ ತ್ರಿವಳೀ ಭಾರ್ಗವಿವತ್ಸ ಉದ್ಯ |
ದ್ರವಿ ಪೋಲುವ ಕೌಂಸ್ತುಭ ನವ ವೈಜಯಂತೀ | 
ಸುವಿಶಾಲ ಹೃದಯದೋಳ್ವಿವಿಧಾ ಹಾರಗಳಾ |
ನವನೀತ ಚೋರಾ ಶ್ರೀ ಪವಮಾನಾರ್ಚಿತನಾ || ೩ ||

ಪದವಿಂಗಡಣೆ -
ಲವಕುಕ್ಷಿ = ಲವ + ಕುಕ್ಷಿ
ಭಾರ್ಗವಿವತ್ಸ = ಭಾರ್ಗವಿ  + ವತ್ಸ 
ಉದ್ಯದ್ರವಿ = ಉದಯದ + ರವಿ
ಹೃದಯದೋಳ್ವಿವಿಧಾ = ಹೃದಯದೋಳ್ + ವಿವಿಧ

ಪದಾರ್ಥ -
ಲವಕುಕ್ಷಿ = ಚಿಕ್ಕದಾದ ಕುಕ್ಷಿ = ಚಿಕ್ಕ ಹೊಟ್ಟೆಯ ಭಾಗ,
ತ್ರಿವಳೀ = ಮೂರು ಮಡಿಕೆ ಇರುವ, ಭಾರ್ಗವಿ = ವಜ್ರ,
ವತ್ಸ = ಎದೆ, ಉದ್ಯದ್ರವಿ = ಉದಯಿಸಿದ ಸೂರ್ಯ,
ಪೋಲುವ = ಹೋಲುವ, ಕೌಂಸ್ತುಭ = ಕೌಸ್ತುಭ ಮಣಿ,
ವೈಜಯಂತೀ = ಶ್ರೀ ನಾರಾಯಣನು ಧರಿಸುವ ಒಂದು ಬಗೆಯ ಹಾರ, ಸುವಿಶಾಲ = ಸುಂದರವಾದ ವಿಶಾಲ,
ನವನೀತ = ಬೆಣ್ಣೆ 

ಭಾವಾರ್ಥ -
ಚಿಕ್ಕದಾದ, ಮೂರು ಕಡೆ ಮಡಿಕೆಯ ಹೊಟ್ಟೆಯ ಭಾಗ, ವಜ್ರದಂತೆ ಇರುವ ಎದೆಯೂ, 
ಉದಯಿಸಿದ ಸೂರ್ಯನಂತೆ ಕಂಗೊಳಿಸುವ ಕೌಸ್ತುಭ ಮಣಿ, ನವ ವೈಜಯಂತಿಯ ಮಾಲೆ,
ವಿವಿಧವಾದ ಹಾರಗಳು ಆ ಸು(ಸುಂದರವಾದ)-ವಿಶಾಲವಾದ ಎದೆಯಲ್ಲಿ ಶೋಭಿಸುತ್ತಿರುವವನ,
ಶ್ರೀ ಅಂದರೇ ಲಕ್ಷ್ಮೀ ದೇವಿ ಮತ್ತು ವಾಯುದೇವರು ಅರ್ಚಿಸುವಂತಹ ಬೆಣ್ಣೆಯ ಕಳ್ಳ ಶ್ರೀ ಕೃಷ್ಣನ 

ಪದಕಾ ಸರಗಿಯು ಜಾಂಬೂನದ ಕಂಬು ಕಂಠಾ | 
ರದನೀಕರ ತೆರ ಬಾಹು ಚದುರಾ ಭುಜಕೀರ್ತಿ | 
ಬದರಾ ಸಂಕಾಶಾ ಅಂಗದ ರತ್ನ ಕಟಕಾ | 
ಪದುಮಾರುಣ ಕರವಾ ಮಧ್ಯದಲಿ ಯಿಟ್ಟವನಾ || ೪ ||

ಪದವಿಂಗಡಣೆ -
ಪದುಮಾರುಣ = ಪದುಮ + ಅರುಣ

ಪದಾರ್ಥ -
ಸರಗಿ = ಒಂದು ಹಾರ, ಜಾಂಬೂನದ = ಬಂಗಾರದ,
ಕಂಬು = ಶಂಖ, ರದನೀಕರ = ಆನೆಯ ದಂತ, ತೆರ = ತರಹ,
ಚದುರಾ = ಸುಂದರವಾದ, ಭುಜಕೀರ್ತಿ = ಭುಜಕ್ಕೆ ಧರಿಸುವ ಆಭರಣ, ಬದರ = ಚಂದ್ರ, ಸಂಕಾಶಾ = ಅದರಂತೆ, ಅಂಗದ = ತೋಳಿನಲ್ಲಿ ಧರಿಸುವ  ಒಂದು ಆಭರಣ, ಕಟಕ = ಕಡಗ,
ಪದುಮಾರುಣ = ಕೆಂಪು ಕಮಲ / ಕೆಂದಾವರೆ, ಮಧ್ಯದಲಿ = ಸೊಂಟದಲ್ಲಿ

ಭಾವಾರ್ಥ -
ಶಂಖದಂತೆ ಮೂರು ಗೆರೆಗಳು ಇರುವ ಆ ಕಂಠ, ಅದರಲ್ಲಿ ಬಂಗಾರದ ಹಾರದಲ್ಲಿ ಪದಕವಿದೆ,
ಆನೆಯ ದಂತದಂತೆ ಇರುವ ಬಾಹುಗಳು, ಅದಕೆ ಸುಂದರವಾದ ಭುಜಕೀರ್ತಿ
ಚಂದ್ರನಂತೆ ಪ್ರಕಾಶಿಸುವ ತೋಳುಬಳೆಗಳು, ಕೈಯಲ್ಲಿ ರತ್ನದ ಕಡಗ,
ಕಮಲದಂತೆ ಕೆಂಪಾದ ಕರಗಳನ್ನು ಸೊಂಟದಲ್ಲಿ ಇಟ್ಟವನ

ವಿಧು ಬಿಂಬೋಪಮ ಚಲುವ ವದನ ಕೆಂದುಟಿಯಾ | ಭಿದುರಾಭ ದಶನಾಳಿಂಗದಿರೊಲ್ಕಿರಿ ನಗಿಯಾ |
ಕದಪು ಕನ್ನಡಿ ನಾಸಾ ತುದಿ ಚಂಪಕ ತೆನಿಯಾ | ಉದಕೇಜಾಯತ ನೇತ್ರ ಯದು ವಂಶೋದ್ಭವನಾ || ೫ ||

ಪದವಿಂಗಡಣೆ -
ಭಿದುರಾಭ = ಭಿದುರ /ಬಿದುರ /ಬದರ + ಆಭ
ದಶನಾಳಿಂಗದಿರೊಲ್ಕಿರಿ = ದಶನ + ಆಳಿಂಗದಿ/ ಆಲಿಂಗದಿ + ರೊಲ್ + ಕಿರಿ
ಉದಕೇಜಾಯತ = ಉದಕೇ + ಜಾಯತ

ಪದಾರ್ಥ -
ವಿಧು = ಚಂದ್ರ, ಬಿಂಬೋಪಮ = ಬಿಂಬ ದಂತೆ / ಅದರಂತೆ,
ವದನ = ಮುಖ, ಭಿದುರಾಭ = ಚದುರಿದಂತೆ / ಚಂದ್ರನಂತೆ, ದಶನ = ಹಲ್ಲುಗಳು, ಕಿರಿನಗೆ = ಕಿರುನಗೆ, ಕದಪು = ಕನ್ನಡಿ,
ನಾಸ = ಮೂಗು, ಉದಕೇಜಾಯತ = ಕಮಲ

ಭಾವಾರ್ಥ -
ಚಂದ್ರನಂತೆ ಪ್ರಕಾಶಿಸುವ ಚೆಲುವಾದ ಮುಖ, ಅದರಲ್ಲಿ ಕೆಂಪಾದ ತುಟಿ,
ಆ ತುಟಿಗಳ ಕಿರುನಗೆಯ ಆಲಿಂಗನದಲ್ಲಿ ಇರುವ ಚಂದ್ರನಂತೆ ಕಾಂತಿಯುಳ್ಳ ಹಲ್ಲುಗಳು,
ಕನ್ನಡಿಯಂತೆ ಸ್ವಚ್ಛವಾಗಿ ಹೊಳೆಯುವ ಕೆನ್ನೆ, ಸಂಪಿಗೆಯ ತೆನೆಯಂತೆ ಸುಂದವಾಗಿ ಇರುವ ಮೂಗಿನ ತುದಿ,
ಕಮಲದಂತೆ ಇರುವ ಕಣ್ಣುಗಳ್ಳುಲವನ, ಯದುವಂಶದಲ್ಲಿ ಜನಿಸಿದವ ಶ್ರೀ ಕೃಷ್ಣನ

ಕಲಿತಾ ಕುಂಡಲ ಕರ್ಣ ಸುಲತಾ ಭ್ರೂಯುಗಳಾ | 
ಲಲಿತಾ ಬಾಲ ಶಶಾಂಕಾ ತಿಲಕಾಂಕಿತ ಫಾಲಾ | ಅಳಿಜಾಲಾವೆನಿಪಾ ಕುಂತಳ ರತ್ನಚಕಿತಾ | 
ಕಲಧೌತಾ ಮುಕುಟಾ ದಿಗ್ವಿಲಯಾ ಬೆಳಗುವದಾ ॥ ೬॥

ಪದವಿಂಗಡಣೆ -
ಭ್ರೂಯುಗಳಾ = ಭ್ರೂ + ಯುಗಳ
ಅಳಿಜಾಲಾ = ಅಳಿ + ಜಾಲ

ಪದಾರ್ಥ -
ಕಲಿತಾ = ಕೂಡಿದ, ಕುಂಡಲ = ಕಿವಿಯ ಆಭರಣ,
ಸುಲತಾ = ಸುಂದರವಾದ ಲತೆ, ಭ್ರೂಯುಗಳಾ = ಎರಡು ಹುಬ್ಬುಗಳು, ಲಲಿತಾ = ಸುಂದರವಾದ, ಫಾಲಾ = ಹಣೆ,
ಅಳಿಜಾಲಾವೆನಿಪಾ = ಭೃಂಗದ ಗುಂಪಿನನಂತೆ, ಕುಂತಳ = ಕೂದಲು, ಚಕಿತಾ = ವಿಸ್ಮಯವಾದ, ಕಲಧೌತಾ = ಬಂಗಾರ,
ದಿಗ್ವಿಲಯಾ = ಬ್ರಹ್ಮಾಂಡ

ಭಾವಾರ್ಥ -
ಕಿವಿಗಳಿಗೆ ಕೂಡಿದ ಕುಂಡಲ , ಸುಂದರವಾದ ಲತೆಗಳಂತೆ ಹುಬ್ಬುಗಳು,
ಉದಯಿಸಿದ ಚಂದ್ರನಂತೆ ಸುಂದರವಾಗಿ ಪ್ರಕಾಶಮಾನವಾದ ತಿಲಕವು ಹಣೆಯಮೇಲೆ,
ಭೃಂಗದ ಗುಂಪಿನನಂತೆ ದಟ್ಟವಾಗಿ ಇರುವ, ರತ್ನದಂತೆ ವಿಸ್ಮಯವಾಗಿ ಹೊಳೆಯುವ ಗುಂಗುರು ಕೂದಲು,
ಯಾರ ಚಿನ್ನದ ಮುಕುಟವು ಇಡಿಯ ಬ್ರಹ್ಮಾಂಡವನ್ನೇ ಬೆಳಗುವುದೋ

ಶಠ ಕೂರ್ಮರೂಪಿಯಾ ಕಿಟಿ ಮಾನವಹರಿಯಾ ।
ವಟು ಭಾರ್ಗವ ಕಾಕುಸ್ಥ ಶಕಟ ಕಂಸ ದ್ವಿಷಿಯಾ | ನಿಟಿಲಾಂಬಕ ಸಹಯಾ ಖಳ ಕಟಕಾರಿ ಭೀಮಾ |
ತಟಶಾಯೀ ಜಗನ್ನಾಥವಿಠಲನಾ ಕೃತಿಯಾ || ೭ ||

ಪದವಿಂಗಡಣೆ -
ಮಾನವಹರಿಯಾ = ಮಾನವ + ಹರಿ
ಕಟಕಾರಿ = ಕಟಕಾ + ಅರಿ 
ಜಗನ್ನಾಥವಿಠಲನಾ ಕೃತಿಯಾ = ಜಗನ್ನಾಥವಿಠಲನ + ಆಕೃತಿ

ಪದಾರ್ಥ -
ಶಠ = ಚತುರ, ಕಿಟಿ = ವರಾಹ, ಮಾನವಹರಿ = ನರಹರಿ,
ಕಾಕುಸ್ಥ =  ಇಕ್ಷ್ವಾಕು ವಂಶದಲ್ಲಿ ಜನಿಸಿದವ = ಅವನ ವಂಶದಲ್ಲಿ ಜನಿಸಿದ ಶ್ರೀ ರಾಮಚಂದ್ರ,
ದ್ವಿಷಿಯಾ = ದ್ವೇಷಿಯ, ನಿಟಿಲಾಂಬಕ = ಹಣೆಯಲ್ಲಿ
 ಕಣ್ಣುಳ್ಳವ = ರುದ್ರದೇವರು, ಖಳ = ದುಷ್ಟ,
ಕಟಕಾರಿ = ಸೈನೆಯ ವೈರಿ, ಆಕೃತಿ  = ಆಕಾರ

ಭಾವಾರ್ಥ -
ಚತುರತನದಿಂದ ವೇದವ ರಕ್ಷಿಸಿದ ಮತ್ಸ್ಯರೂಪನ , ಕೂರ್ಮರೂಪನ, ವರಾಹರೂಪನ, ನರಹರಿರೂಪನ,
ವಾಮನರೂಪನ, ಪರಶುರಾಮ ರೂಪನ, ರಾಮಚಂದ್ರನ, ಶಕಟಾಸುರ, ಕಂಸನ ವೈರಿಯಾದ ಕೃಷ್ಣನ,
ರುದ್ರದೇವರ ಸಹಾಯಕನಾದ ಅಂದರೇ ಮೋಹಶಾಸ್ತ್ರ ಭೋದಿಸಿದ ಬೌದ್ಧರೂಪಿಯ, ದುಷ್ಟರ ಸೈನ್ಯಯ ವೈರಿಯಾದ ಕಲ್ಕಿ ರೂಪನ,
ಭೀಮಾ ನದಿಯ ತಟದಲ್ಲಿ ನೆಲೆಸಿರುವ ಜಗನ್ನಾಥ ವಿಠಲನ, ಪಾಂಡುರಂಗ ಮೂರುತಿಯ

             ||ಮಧ್ವಾನ್ತರ್ಗತ ಶ್ರೀಕೃಷ್ಣಾರ್ಪಣಮಸ್ತು||

Thursday, 2 April 2020

ರಾಮ ಹಾಗು ಕೃಷ್ಣಾ....

ಎಲ್ಲಾ ದಾಸರು ಸಂತರು ರಾಮಕೃಷ್ಣರನ್ನು ಮುಕ್ತ ಕಂಠದಿಂದ ಹಾಡಿ ಭಕ್ತಿ ಮಾರ್ಗದಲ್ಲಿ ಕುಣಿಯುತ್ತಾ ನಲಿಯುತ್ತಾ,  ಮುಕುತಿಗೆ ತುಂಬಾ ಸರಳವಾದ ಮಂತ್ರವನ್ನು ಹಾಡಿ ಹೇಳಿದಾರೆ.
ಕೃಷ್ಣಾ ಎಂದರೆ ತನ್ನ ಲೋಕವನ್ನೇ ಕೊಡುವನು ಎಂದು ವ್ಯಾಸರಾಜರು ಹೇಳಿದ್ದಾರೆ. 
ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆಯು ಅನ್ನೋ ಪುರಂದರ ದಾಸರ ಪದ್ಯವೂ ಉಂಟು.
 
ರಾಮಾವತಾರ ಹಾಗು ಕೃಷ್ಣಾವತಾರ ನಮ್ಮ ಕಲಿಯುಗಕ್ಕೆ ತುಂಬಾ ಹತ್ತಿರವಾಗಿ ಆಗಿಹೋದ ಅವತಾರಗಳು.
ಹೀಗಾಗಿಯೇ ರಾಮ ಕೃಷ್ಣರು ನಮಗೆ ತುಂಬಾ ಬೇಗ ಸಿಗುತ್ತಾರೆ ಅನ್ನೋ ನಂಬಿಕೆ ಹಾಗು ಸತ್ಯವು ಕೂಡಾ ಹೌದು.
ರಾಮಾವತಾರ  ಮತ್ತು ಕೃಷ್ಣಾವತಾರದ ಅಂತರ ಹಾಗು ಸಾಮ್ಯವನ್ನು ರಾಯಚೂರು  ಜಿಲ್ಲೆಯ ಕಸಬಾ ಲಿಂಗಸೂಗೂರ ಗ್ರಾಮದ ವರದೇಂದ್ರ ತೀರ್ಥರ ಸಾನಿಧ್ಯದಲ್ಲಿ ವರದೇಶ ದಾಸರು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. 
ಅವರ "ರಾಮ ಹರೇ ರಾಮ ಹರೇ, ಕೃಷ್ಣ ಹರೇ ಕೃಷ್ಣ ಹರೇ" ಅನ್ನೋ ಪದ್ಯ ಇವೆರೆಡು ಅವತಾರದ ದೃಷ್ಟಾಂತವನ್ನು ತುಂಬಾ ಸರಳವಾಗಿ ವಿವರಿಸಿದೆ. 
ಒಂದೆರಡು ನುಡಿಯನ್ನು ಇಲ್ಲಿ ಬರಿಯುತ್ತೆನೆ.

ಹರಧನುಭಂಗಿಸಿ ಹರುಷದಿಜಾನಕಿ
ಕರವಪಿಡಿದ ಶ್ರೀರಾಮ ಹರೇ
ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ
ಶರಣರ ಪಾಲಕ ಕೃಷ್ಣ ಹರೇ...

ರಾಮ ತನ್ನ ಮದುವೆಗೋಸ್ಕರ ಮಿಥಿಲಾ ರಾಜ್ಯಕ್ಕೆ ಹೋಗಿ ಅಲ್ಲಿದ ಸ್ವಯಂವರದಲ್ಲಿ ಭಾಗವಹಿಸಿ, ಹರ ಧನುಷನ್ನು ಲೀಲಾಜಾಲವಾಗಿ ಮುರಿದು ಸೀತಾ ಮಾತೆಯನ್ನು ಮದುವೆ ಆಗುತ್ತಾನೆ,  ಆದರೇ ಅದೇ ಕೃಷ್ಣಾವತಾರದಲ್ಲಿ ಸುಮ್ಮನೆ ಒಂದು ಬಿನ್ನಹ ಪತ್ರವನ್ನು ನೋಡಿ, ಅಣ್ಣನ ಸೆರೆ ಇಂದ ಬಿಡಿಸಿಕೊಂಡು ಬಂದು ಏನು ನಡೆದಿಲ್ಲವೇನೋ ಅನ್ನೋ ತರಹ ರುಕ್ಮಿಣಿಯನ್ನು ಮದುವೆಯಾಗುತ್ತಾನೆ. 

ಜನಕ ಪೇಳೆ ಲಕ್ಷ್ಮಣ ಸೀತಾ ಸಹ
ವನಕೆ ತೆರಳಿದ ರಾಮ ಹರೇ
ವನಕೆ ಪೋಗಿ ತನ್ನಣುಗರೊಡನೆ ಗೋ -
ವನು ಪಾಲಿಪ ಶ್ರೀ ಕೃಷ್ಣ ಹರೇ...

ತಂದೆಯ ಮಾತನ್ನು ಕೇಳಿ ಮಡದಿ ಹಾಗು ತಮ್ಮನನ್ನು ಕರೆದುಕೊಂಡು ವನವಾಸಕ್ಕೆ ರಾಮ ಹೋದರೆ, ಇಲ್ಲಿ ಕೃಷ್ಣ ತನ್ನ ಇಡೀ ಬಾಲ್ಯವನ್ನೇ ತನ್ನ ಗೊಲ್ಲ ಗೆಳೆಯರ ಜೊತೆಗೆ ಗೋಗಳ ಕಾಯುತ ವನದಲ್ಲೇ ಇರುತ್ತಾನೆ. 
ರಾಜ್ಯ ಭೋಗವನ್ನು ಬಿಟ್ಟು ರಾಮ ವನವಾಸಕ್ಕೆ ಹೋದರೆ ಕೃಷ್ಣಾ ವನದಲ್ಲೇ ಇದ್ದು ಮುಂದೆ ರಾಜನಾಗುತ್ತಾನೆ. 

ಗಿರಿಗಳಿಂದ ವರಶರಧಿ ಬಂಧಿಸಿದ
ಪರಮ ಸಮರ್ಥ ಶ್ರೀರಾಮ ಹರೇ
ಗಿರಿಯ ತನ್ನ ಕಿರಿ ಬೆರಳಿಲೆತ್ತಿ ಗೋ -
ಪರನ ಕಾಯ್ದ ಶ್ರೀ ಕೃಷ್ಣ ಹರೇ...

ಲಂಕೆಗೆ ಹೋಗುವುದಕ್ಕೆ ದಾರಿ ಬಿಡು ಎಂದು ಸಮುದ್ರರಾಜನನ್ನು ಕೇಳಿಕೊಳುತಾನೆ, ಸಮುದ್ರರಾಜ ಸ್ಪಂದಿಸದ ಕಾರಣಕ್ಕೆ ಇಡೀ ಸಮುದ್ರವನ್ಮೇ ಗುಡ್ಡಗಳಿಂದ ಬಂಧಿಸುತ್ತಾನೆ ಆದರೇ ಕೃಷ್ಣಾವತಾರದಲ್ಲಿ ಮಗು ಒಂದು ಚೆಂಡು ಹೇಗೆ ಏತತ್ತೋ ಹಾಗೇ ಗೋವರ್ಧನ ಗಿರಿಯನ್ನು ತನ್ನ ಕಿರಿಬೆರಳಿಂದ ಎತ್ತಿ ಎಲ್ಲಾ ತನ್ನ ಊರನ್ನೇ ರಕ್ಷಿಸುತ್ತಾನೆ. 

ಖಂಡಿಸಿದಶಶಿರ ಚಂಡಾಡಿದ ಕೋ -
ದಂಡಪಾಣಿ ಶ್ರೀ ರಾಮ ಹರೇ
ಪಾಂಡುತನಯರಿಂ ಚಂಡಕೌರವರ
ದಿಂಡುಗೆಡಹಿಸಿದ ಕೃಷ್ಣ ಹರೇ...

ರಾವಣನ ದಶಶಿರವನ್ನು ತನ್ನ ಕೋದಂಡದಿಂದ ತುಂಡರಸಿ ಸಂಹರಿಸಿದರೆ, ಇಲ್ಲಿ ಕೃಷ್ಣ ತಾನು ಸ್ವತಃ ಏನು ಮಾಡದೆ ಪಾಂಡವರಿಂದ ಮಾಡಿಸಿ ಎಲ್ಲಾ ದುಷ್ಟ ಕೌರವರನ್ನ ಪಾಂಡವರಿಂದಾನೆ ಕೊಲ್ಲಿಸುತ್ತಾನೆ. 

ಭರತ ಪೇಳೆಲರಸತ್ವವ ಸ್ವೀ -
ಕರಿಸಿದತ್ವರದಲಿ ರಾಮ ಹರೇ
ವರಧರ್ಮಾದ್ಯರ ಧರಿಯೊಳು ಮೆರೆಸಿದ
ಪರಮಕೃಪಾಕರ ಕೃಷ್ಣ ಹರೇ...

ಭರತ ರಾಮನನ್ನು ಭಿನಹಿಸಿದಂತೆಯೇ ವನವಾಸ ಮುಗಿಸಿ ಬಂದ ಮೇಲೆ ರಾಜ್ಯ ಪಟ್ಟದಲ್ಲಿ ಕೂರುತ್ತಾನೆ, ದ್ವಾಪರದಲ್ಲಿ ತನಗೇನು ಬೇಡ ಅನೋತರಹ ಬರೇ ಪಾಂಡವರನ್ನೇ ಮೆರೆಸುತ್ತಾನೆ. 

ಚದುರೆ ಶಬರಿಯಿತ್ತ ಬದರಿಯ ಫಲವನು
ಮುದದಿ ಸೇವಿಸಿದ ರಾಮ ಹರೇ
ವಿದುರನ ಕ್ಷೀರಕೆ ವದಗಿ ಪೋದ ಶ್ರೀ
ಪದುಮನಾಭ ಜಯ ಕೃಷ್ಣ ಹರೇ...
ಶಬರಿ ಇದ್ದ ಜಾಗಕ್ಕೆ ತಾನೇ ಹೋಗಿ ಅವಳು ಕೊಟ್ಟ ಹಣ್ಣನ್ನು ತಿನ್ನುತಾನೆ, ಇಲ್ಲಿ ಕೃಷ್ಣ ಇಡೀ ಕೌರವರ ಆವ್ಹಾನವನ್ನೇ ತಿರಸ್ಕರಿಸಿ ವಿದುರನ ಮನೆಗೆ ಹೋಗಿ ಅವನ ಔತಣ ಸ್ವೀಕರಿಸುತ್ತಾನೆ.

ಯಾವುದೇ ಅವತಾರ ವಾಗಲಿ ಅವನ ಭಕುತರ ಅಡಿ  ಇರುವ ಕಾರುಣ್ಯ ಅಪಾರವಾದದ್ದು,  ಹಾಗು ಸಾಮಾನ್ಯವಾದದ್ದು. 
ಕೆಲವು ಸಾಮ್ಯ ತೋರಿಸುವ ಪದಗಳು.. 

ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ
ಸುಲಲಿತ ಗುಣನಿಧಿ ರಾಮ ಹರೇ
ಬಲುವಕ್ರಾಗಿದ್ದ ಬಲೆಯ ಕ್ಷಣದಲಿ
ಚಲುವೆಯ ಮಾಡಿದ ಕೃಷ್ಣ ಹರೇ...

ಅಹಲ್ಯೆಯನ್ನು ತನ್ನ ಪಾದದ ಸ್ಪರ್ಶದಿಂದೇ ಶಿಲೆಯಯಿಂದ ಚೆಲುವೆ ಮಾಡುತ್ತಾನೆ, ಅದೇ ಇಲ್ಲಿ ವಕ್ರವಾಗಿದ್ದ ಹೆಣ್ಣನ್ನು ಕ್ಷಣದಲ್ಲೇ ಚೆಲುವೆ ಮಾಡುತ್ತಾನೆ. 

ರಾಮ ರಾಮ ಯಂದು  ನೇಮದಿ ಭಜಿಪರ
ಕಾಮಿತ ಫಲದ ಶ್ರೀ ರಾಮ ಹರೇ
ಪ್ರೇಮದಿ ಭಕ್ತರ ಪಾಲಿಪ ಶ್ರೀ ವರ -
ದೇಶವಿಠಲ ಶ್ರೀ ಕೃಷ್ಣ ಹರೇ...

ರಾಮ ರಾಮ ಎಂದು ನಿತ್ಯದಿ ಭಜಿಪರಿಗೆ ಬೇಡಿದ ವರಗಳನ್ನು ಕೊಡುವ ರಾಮನೇ ನಿನಗೆ ನಮೋ, 
ಕೃಷ್ಣಾ ಕೃಷ್ಣಾ ಎಂದರೆ ಭಕ್ತರ ಸಕಲ ಅಭೀಷ್ಟೆಗಳನ್ನು ಪೂರ್ಣ ಮಾಡುವ ಕೃಷ್ಣಾ ನಿನಗೆ ನಮೋ ಎಂದು  ವರದೇಶ ದಾಸರು ತಮ್ಮ ಈ ಅಮೂಲ್ಯವಾದ ಕೃತಿಯಲ್ಲಿ ಹಾಡಿ ಹೋಗಿಳಿದಾರೆ. 

Sunday, 29 December 2019

ನಮ್ಮ ಗುರುಗಳು.....

ಶ್ರೀವಿದ್ಯಾಮಾನ್ಯ ತೀರ್ಥರು ತಯಾರಿಸಿದ ಶಿಷ್ಯರೆಲ್ಲರೂ ಮಾಧ್ವ ಸಮಾಜದ ಗಜಗಳು, ಅದರಲ್ಲಿ ಪೇಜಾವರರು ಗಜೇಂದ್ರರೇ ಸರಿ. ಸಮಾಜಕ್ಕೆ ಹಾಗು ಶಾಸ್ತ್ರಕ್ಕೆ ಇರುವ ಸಮಾನವನ್ನು ತೋರಿಸಿಕೊಟ್ಟು ಇವೆರಡಕ್ಕೂ ದುಡಿದ ಅಪ್ರತಿಮರು.
"ಜನ ಸೇವೆಯೇ ಜನಾರ್ಧನನಿಗೆ ಕೊಡುವ ಟ್ಯಾಕ್ಸ್" ಎಂದು ಯಾವಾಗಲು ಹೇಳುತ್ತಿದ್ದರು. 
ತುಂಬಾ ಜನಕ್ಕೆ ಗೊತ್ತಿಲ್ಲ, ನಮ್ಮ ನಾಡ ಗೀತೆಯಲ್ಲಿ ಆಚಾರ್ಯ ಮಧ್ವರ ಹೆಸರು ಇದ್ದಿದಿಲ್ಲ, ಪೇಜಾವರರೇ ಸ್ವತಃ ಆಗಿನ ಸರ್ಕಾರದ ಜೊತೆಗೆ ವಾದಮಾಡಿ ಮಧ್ವಾಚಾರ್ಯರ ಹೆಸರು ಸೇರಿಸಿದ್ದು. 
ಅವರ ಮಿಂಚಿನಂತೆ ಇದ್ದ ಸಂಚಾರ, ಆ ತೇಜಸ್ಸು, ಆ ವರ್ಚಸ್ಸು,  ಆ ಪ್ರಖರ ನಡೆಗಳು, ಆ ನೇರ ಮಾತುಗಳು,  ಎಷ್ಟೇ ವಿರೋಧಗಳು ಇದ್ದರು ಅವರ ನಿಲುವೇ ಕೊನೇಯದ್ದು. 
ಅಬ್ಬಾ! ನಮ್ಮ ಗುರುಗಳು ಏನಿದಿಲ್ಲ ಹೇಳಿ? 
ಅವರ ರಾಮ ಜನ್ಮ ಭೂಮಿ ಚಳುವಳಿಗೆ ರಾಮನೇ ಪ್ರೀತಿಯಿಂದ ಮರಳಿ ಬಂದಿರಬಹುದು. 
ಅವರು ಸ್ಥಾಪಿಸಿದ ಪೂರ್ಣಪ್ರಜ್ನ್ಯ ವಿದ್ಯಾಪೀಠ ಅದೆಷ್ಟು ವಿದ್ವಾಂಸರನ್ನ ಹುಟ್ಟಿಸಿದೆಯೋ. 
ಮಧ್ವ ಮಂಡಲವನ್ನು ಸ್ಥಾಪಿಸಿ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಆಶ್ರಯವಿತ್ತು ತಮ್ಮ ಜೀವನ ತುಂಬಾ ವಿದ್ಯಾ ದಾನವನ್ನು ಮಾಡಿದ್ದಾರೆ. 

ನಾವು ಶ್ರೀವಾದಿರಾಜರ, ಶ್ರೀವ್ಯಾಸರಾಜರಂತಹ ಯತಿಗಳ ಸಾಮಾಜಿಕ ಕಳಕಳಿಯ ಬಗ್ಗೆ ಓದಿದ್ದು ಕೇಳಿದ್ದು ಅಷ್ಟೇ, ಆದರೇ ಅದು ಪೇಜಾವರರ ಮುಖಾಂತರ ನೋಡಿದ್ದೀವಿ. 
ಶೂದ್ರರು ಮೇಳು ಕೀಳು ಅಂತೆಲ್ಲ ನೋಡದೆ ಅವರ ಮನೆಗೆ ಪಾದ ಪೂಜೆಗೆ ಹೋದವರು. 
ಇನ್ನೂ ತುಂಬಾ ಜನಕ್ಕೆ ಗೊತ್ತಿಲ್ಲದ ವಿಷಯ ಅಂದರೆ, ಉಮಾ ಭಾರತಿಯವರಿಗೆ ಸನ್ಯಾಸ ದೀಕ್ಷೆ ಕೊಟ್ಟವರು ಪೇಜಾವರರೇ. 

ಅವರ ಆ ವಯಸ್ಸಿನಲ್ಲೂ ಪ್ರತಿ ಏಕಾದಶಿಯ ಭಜನೆ ಮತ್ತು ಹರಿವಾಣ ಸೇವೆ ಇಂದಿಗೂ ಅದ್ಭುತವೇ ಸರಿ. 
ಮಠದ ಶಿಷ್ಯನಾಗಿದ್ದ ನನ್ನನು ಮತದ ಶಿಷ್ಯನಾಗಿ ಮಾಡಿದ ನನ್ನ ಗುರುಗಳು. 
ನನ್ನಲ್ಲಿ ಎಲ್ಲಾ ವಿಚಾರಗಳ, ಅದು ಧಾರ್ಮಿಕವಾಗಿದ್ದೆ ಇರಲಿ ಸಾಮಾಜಿಕವಾಗಿದ್ದೆ ಇರಲಿ, ಕಾಣದೆ ಸ್ಪೂರ್ಥಿಯಾಗಿದ್ದ ನನ್ನ ಗುರುಗಳು.
ಅವರ ಪ್ರಭಾವ ಎಷ್ಟು ಇತ್ತೆಂದರೆ ಉಡುಪಿ ಅಂದ ಕೂಡಲೇ ನೆನಪಾಗುತಿದದ್ದು ಶ್ರೀಕೃಷ್ಣ, ಹಾಗು ಪೇಜಾವರರು. 
ವ್ಯಾಸರಾಜರು ಹ್ಯಾಗೆ ತಿರುಪತಿಯ ವೆಂಕಟರಮಣ್ಣನ ಪೂಜಿಸಿದ್ದರೋ ಅದೇ ರೀತಿ ನನ್ನ ಗುರುಗಳು ಅಯೋಧ್ಯೆಯ ರಾಮನನ್ನು ಪೂಜಿಸಬೇಕಿತ್ತು ಅನ್ನುವ ಆಸೆ ಇತ್ತು. 
ಅವರ ಮುಗ್ಧ ನಗು, ಆ ಬೆಟ್ಟದ ಪಾಂಡಿತ್ಯ ಎಲವೂ ಇವತ್ತು ಬರಿಯ ನೆನಪು. 
ನಾನೇನು ಅವರ ಮಠದ ಶಿಷ್ಯನಲ್ಲ,
ಅವರ ಬಳಿ ವೇದಶಾಸ್ತ್ರ ಕಲಿತ ಶಿಷ್ಯನೂ ಅಲ್ಲಾ, 
ಗೊತ್ತೋ ಗೊತ್ತಿಲದೋ ಅವರ ಗರಡಿಯಲ್ಲಿ ಓದಿ ಬೆಳೆದ ಮಧ್ವ ಮಂಡಲದ ವಿಧ್ಯಾರ್ಥಿನು ಅಲ್ಲಾ, 
ಅವರ ಸಾಮಾಜಿಕ ಕಳಕಳಿಗೆ ಮನಸೋತ ಅವರ ಅನುಯಾಯಿನೂ ಅಲ್ಲಾ. 
ಅವರು ಎಂದಿಗೂ ನನಗೆ "ಸಾಮ್ರಾಟರು".
ಇಂದಿನ ಕಾಲದ ಯತಿಚಕ್ರವರ್ತಿಯು ಹೌದು, ನನ್ನ ಗುರುಗಳು! ನಮ್ಮ ಗುರುಗಳು!!
ನನ್ನ ಗುರುಗಳಿಗೆ ನಾನು ಬರೆದ ಈ ಪುಟ್ಟ ಲೇಖನವನ್ನು ಸಮರ್ಪಿಸುತ್ತೇನೆ. 
ಶ್ರೀ ಕೃಷ್ಣಾರ್ಪಣಮಸ್ತು.
                                    -ವಿಶ್ವಸಂತ ವಿಶ್ವೇಶತೀರ್ಥರ ಭಕ್ತ 
                                          ಅನಿರುದ್ಧ ಪದಕಿ 


Wednesday, 4 December 2019

ದಾಸರು ಮತ್ತು ಕವಿಗಳು

ದಾಸ ಸಾಹಿತ್ಯ ಅನೋದು ಬರೇ ಸಾಮಾಜಿಕ ಪರಿವರ್ತನೆಗಾಗಿ ಮೂಡಿ ಬಂದ ಚಳುವಳಿ ಅಲ್ಲಾ. 
ಹಾಗೆ ಬರೇ ಅಧ್ಯಾತ್ಮಕ್ಕಾಗಿ ಬಂದ ಮಡಿ ವಸ್ತುವು ಅಲ್ಲಾ. 
ದಾಸ ಸಾಹಿತ್ಯ ಅನ್ನೋದು ಆ "ವೀರ" ಮಧ್ವ ಯತಿಯ ಸಿಧಾಂತವನ್ನು ಜನರ ಮನೆ ಮನೆಗೆ ತಲುಪಿಸಿವಂತಹ ಮಾಧ್ಯಮ. 
ಇಲ್ಲಿ ಸಾಮಾಜಿಕ ಕಳಕಳಿಯೂ ಉಂಟು ಹಾಗು ಆ ಸರ್ವೋತ್ತಮನ  ಒಲಿಸಿಕೊಳ್ಳೋ ಮಾರ್ಗವು ಉಂಟು. 
ಬರಿಯುವ ಪಾಂಡಿತ್ಯವಿದೆ ಎಂದು ದಾಸರು ಬರದದಲ್ಲ. 
ಕನಕ ದಾಸರ ಒಂದು ಪದ ನೆನಪಾಗುತ್ತೆ 
ವರಕವಿಗಳ ಮುಂದೆ ನರಕವಿಗಳು ವಿದ್ಯೆ ಮಾಡಬಾರದು , ಈ
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು||
ಈಗಿನ ರಸಋಷಿಗಳು, ವಿಶ್ವಮಾನವರು, ವಾರಕವಿಗಳು, ಗಾರುಡಿಗರು  ಥರ, ಸುಖಾ ಸುಮ್ಮನೆ ಅಂಕಿತವನಿಟ್ಟುಕೊಂಡು ಬರೆದವರಲ್ಲ.
ಆಶ್ಚರ್ಯವೇನೆಂದರೆ ದಾಸರ ಯಾವತ್ತು ಪೆನ್ನು ಮತ್ತು ಪುಸ್ತಕ ಹಿಡಿದು ಕೂತು ಇವತ್ತು ನಾನು ಈ ಪದ್ಯ ಬರದೇ ತೀರಬೇಕು ಅಂತಾ ಸರ್ವಥಾ ಬರೆದವರಲ್ಲ. 
ಅವರ ಮನದಿಂದ ನೇರ ಸ್ಪುಟವಾದ ಭಕ್ತಿಯ ನುಡಿ ಮುತ್ತುಗಳು ಇವು.
ರವಿ ಕಾಣದು ಕವಿ ಕಾಣುತ್ತಾನೆ ಅಂತ ಮಾತಿದೆ.
ಆದರೆ ಕವಿ ದೇವರನ್ನು ಕಂಡಿದಾನೋ? 
ಕನಕ ದಾಸರ ಪದ್ಯಕ್ಕೆ ಪೂರಕವಾಗಿ ಪ್ರಸನ್ನ ವೆಂಕಟದಾಸರ ಪದ್ಯವು ಇದೆ
ಹಲವು ಕವಿಗಳಿಗೆ ನಿಲುಕದ  ಆನೆ
ಬಲ ಪ್ರಸನ್ವೆಂಕಟನಿಲಯನೆಂಬಾನೆ||
ಇಲ್ಲಿ ಆನೆ ಎಂದರೆ ಪರಮಾತ್ಮ. 
ಕವಿಗಳಿಗೂ ಮತ್ತು ದಾಸರಿಗೂ ತುಂಬಾ ವ್ಯತ್ಯಾಸ ಇದೆ. 
ಕವಿ ಕಾಣದ ವಸ್ತುವನ್ನು,  ಶಬ್ದಗಳ ಮೂಲಕ ಅಲಂಕರಿಸಿ ಬರೆದರೆ, ದಾಸರು ಕಂಡ್ದಿದನ್ನೇ 'ಅಲಂಕರಿಸದೆ' ಬರೆದವರು. 
ದಾಸರೇನು ಛಂದಸ್ಸು ಮತ್ತು ವ್ಯಾಕರಣಗಳನ್ನು  ಧ್ಯಾನದೊಳ್ಳಗಿಟ್ಟು ಅದನ್ನು ತಪ್ಪದ ಹಾಗೆ, ರಾಗ ಶ್ರುತಿಗಳ ತಾಳ ಮೇಳಗಳ ಪರಿವಿಡಿಯಲ್ಲಿ ಬರೆದವರಲ್ಲ. 
ದಾಸರು ಬರೆದದ್ದೇ ವ್ಯಾಕರಣ ಹಾಡಿದ್ದೇ ರಾಗ ಅನುಸರಿಸಿದ್ದೇ ವ್ಯಾಕರಣ. 
ಇಂದಿಗೂ ಪದಗಳನ್ನು ನೋಡಿದರೆ ಆಶ್ಚರ್ಯವಾಗುವಂತಹ ವ್ಯಾಕರಣ ಅದರಲ್ಲಿದೆ. 
ಷಟ್ಪದಿಯ ಛಂದಸ್ಸಿನಲ್ಲಿ ಬಂದ ಹರಿಭಕ್ತಿಸಾರ ಮತ್ತು ಹರಿಕಥಾಮೃತಸಾರಕ್ಕೆ  ಮಿಕ್ಕಾವ ಪದ್ಯಗಳು ಸಮಾನ ಹೇಳಿ  ನೋಡೋಣ?
ಹೌದು,  ಈ ದಾಸರನ್ನ ಹೇಗೆ ಗುರಿತಿಸೋದು? 
ಅದಕ್ಕೂ ನಮ್ಮ ವಿಜಯದಾಸರು ಮಾರ್ಗ ತೋರಿಸಿದ್ದಾರೆ 
ಹರಿದಾಸನಾದರೆ ಹ್ಯಾಂಗಿರಲಿ ಬೇಕು
ನರಲೋಕದ ಚಿಂತೆ ಬಿಟ್ಟುಕೊಡಬೇಕು ||ಪ||
ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು
ಮರುತನೆ ಜಗಕೆ ಗುರುವೆನಲಿ ಬೇಕು
ಪುರಂದರದಾಸರೇ ದಾಸರೆಂದನ ಬೇಕು
ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು||

ದಾಸ ಸಾಹಿತ್ಯ ಬರೇ ಸಾಹಿತ್ಯ ಆಗದಿರಲಿ ನಮ್ಮ ಜೀವನದಲ್ಲಿ ಅದರ ಇಂಪನ್ನು ಹರಿಡಿಸಿ ಅದರ ತತ್ವವನ್ನು ತಿಳಿಯೋಣ.